Thursday, November 12, 2009

ನೀಲು ೩೦


ಮದುವೆಯಾಗಿ ಮಕ್ಕಳಾದ ಮೇಲೆ

ಅಚಾನಕ್ಕಾಗಿ ಇತ್ತೀಚೆ ಸಿಕ್ಕ ಹಳೆಯ ಇನಿಯನಿಗೆ

ಮೊಬೈಲು ನಂಬರು ಕೊಟ್ಟರೆ

ನನ್ನ ನಂಬರಿಗೆ ಗಂಡಸಿನ ಹೆಸರು ಬರೆದುಕೊಂಡ.

ಸದ್ಯ, ಇವನನ್ನು ಮದುವೆಯಾಗಲಿಲ್ಲವಲ್ಲ

ಎಂದು ಖುಷಿಯಾಯಿತು!

Tuesday, October 27, 2009

ನೀಲು ೨೯


ಆಡಿದ್ದನ್ನೇ ಆಡುವ
ಏಳುವ-ಕೂಡುವ-ಮಲಗುವ
ಏಕತಾನದ ಯಾಂತ್ರಿಕ ಜಡತ್ವಕ್ಕೆ
ಮೊದಲ ನೋಟದ ಮೊದಲ ಸ್ಪರ್ಶದ
ನಾಚಿಕೆ-ಕುತೂಹಲ-ರೋಮಾಂಚನದ
ನೆನಪು ಕೂಡ
ಬಾಲಿಷವೆನಿಸುವುದು
ಬದುಕಿನ ವಿಪರ್ಯಾಸವಲ್ಲವೇ?

Thursday, October 22, 2009

ಚಹಾ ಮತ್ತು ಪೇಪರ್

ನಾನು ದಿನಪತ್ರಿಕೆಗಳನ್ನು ಓದಲು ಆರಂಭಿಸಿದ್ದು ಬಹುಷಃ ಆರನೆ ಅಥವಾ ಏಳನೇ ಇಯತ್ತೆಯಲ್ಲಿದ್ದಾಗ ಅನಿಸುತ್ತೆ. ಆಗ ಉತ್ತರ ಕರ್ನಾಟಕದಲ್ಲಿ ಮನೆ ಮನೆಗಳಲ್ಲಿ "ಸಂಯುಕ್ತ ಕರ್ನಾಟಕ" (ಸ.ಕ). ಮುಂಜಾನೆ ಲುಂಗಿ ಬನಿಯನ್ನಿನಲ್ಲಿ ಆರಾಮ ಕುರ್ಚಿಯಲ್ಲೋ, ಮನೆ ಮುಂದಿನ ಕಟ್ಟೆಯಲ್ಲೋ ಕೂತು ಒಂದು ಕೈಯಲ್ಲಿ ಛಾ (ಚಹಾ), ಇನ್ನೊಂದು ಕೈಯಲ್ಲಿ ಸ.ಕ ಹಿಡಿದುಕೊಂಡು ಕೂತಿರುವ ದೃಶ್ಯ ಸಹಜವಾಗಿತ್ತು. ದೊಡ್ಡವನಾದ ಮೇಲೆ ಕಾಲ ಮೇಲೆ ಕಾಲು ಹಾಕಿಕೊಂಡು, ಕೈಯಲ್ಲಿ ಒಂದು ಚಹಾದ ದೊಡ್ಡ ವಾಟಗಾ (ಲೋಟ) ಹಿಡಿದುಕೊಂಡು, ಸ.ಕ ಓದುತ್ತ ಮಂಜಾನೆಯನ್ನು ಆರಂಭಿಸುವ ಕನಸು ಕಾಣುತ್ತಿದ್ದೆ. 

ಮುಂದೆ ಹಾಸ್ಟೆಲಿಗೆ ಸೇರಿದಾಗ ಆ ಕನಸು ನಿಜವಾಗಿ ಬಿಟ್ಟಿತ್ತು. ಒಂದು ಉದ್ದ ಲೋಟದ ತುಂಬ ನೀರು ಚಹಾ ತುಂಬಿಕೊಂಡು ಒಬ್ಬೊಬ್ಬರು ಒಂದೊಂದು ಪುಟವನ್ನು ಹಂಚಿಕೊಂಡು ಇಬ್ಬಿಬ್ಬರು, ಮೂವರು ಸೇರಿ ಸ.ಕ ಓದುತ್ತಿದ್ದೆವು.

ಓದು ಮುಗಿಸಿ ಕೆಲಸ ಸೇರಿದಾಗ, ಮೈಸೂರಿನಲ್ಲಿ ದಿನಾ ಎರಡೆರಡು ದಿನಪತ್ರಿಕೆಗಳು, ಪ್ರಜಾವಾಣಿ ಮತ್ತು ಟೈಪಾಸ್ ಇಂಡಿಯಾ (ಟೈಮ್ಸ್ ಆಫ್ ಇಂಡಿಯಾ). ಬಹುಷಃ ಆರು ಆರುವರೆಗೇ ಸೈಕಲ್ಲಿನ ಮೇಲೆ ಎಲ್ಲ ಪತ್ರಿಕೆ ಹಿಡಿದುಕೊಂಡು ಪೇಪರಿನ ಹುಡುಗ ಬಾಗಿಲ ಸಂದಿಯಿಂದ ಪತ್ರಿಕೆಗಳನ್ನು ಹಾಕಿ ಹೋಗುತ್ತಿದ್ದ. ಖರೆ ಹೇಳುತ್ತೇನೆ, ನಾನು ಮೈಸೂರಿನಲ್ಲಿರುವವರೆಗೂ ಆ ಪೇಪರ್ ಹಾಕುವ ಹುಡುಗನ ಮುಖವನ್ನೇ ನೋಡಿಲ್ಲ (ನಾನು ಎಂದೂ ಏಳುಗಂಟೆಗೆ ಮೊದಲು ಎದ್ದೇ ಇಲ್ಲ). ತಿಂಗಳಿಗೊಮ್ಮೆ ಪೇಪರ್ ಕಾಕುವ ಯಜಮಾನ ಬಂದು ದುಡ್ಡು ತೆಗೆದುಕೊಂಡು ಹೋಗುತ್ತಿದ್ದ. ಸಮಯಕ್ಕೆ ಸರಿಯಾಗಿ ದಿನಪತ್ರಿಕೆಗಳು, ವಾರದ ದಿನಕ್ಕೆ ಸರಿಯಾಗಿ ತರಂಗ, ಸುಧಾ, ಕರ್ಮವೀರ, ಹಾಯ್ ಬೆಂಗಳೂರು, ಲಂಕೇಶ ಪತ್ರಿಕೆಗಳು.

ಇಲ್ಲಿ ಕೂಡ ಬೆಳಿಗ್ಗೆ ಎದ್ದ ತಕ್ಷಣ ಎರಡೇ ನಿಮಿಷದಲ್ಲಿ ಚಹಾ ತಯಾರಾಗುತ್ತದೆ, ಥೇಟ್ ಅಲ್ಲಿನಂತೇ! ಆದರೆ ಮುಂಬಾಗಿಲ ಅಡಿಯಲ್ಲಿ ಪೇಪರು ಇರುವದಿಲ್ಲ. ಯಾಕೆಂದರೆ ಇಲ್ಲಿ ಆ ಒಂದು ಕಲ್ಚರೇ ಇಲ್ಲ. ಅಷ್ಟೇ ಅಲ್ಲ, ಮನೆಗೆ ಏನಾದರೂ ಪೇಪರ್ ಹಾಕಬೇಕೆಂದರೆ ಇಲ್ಲಿ ಪೇಪರಿನ ದುಡ್ಡಿನ ಜೊತೆ, ಡೆಲಿವರಿ ದುಡ್ಡನ್ನು ಕೊಡಬೇಕು! ಅಲ್ಲಿ, ಒಂದು ದಿನ ಪತ್ರಿಕೆ ತಡವಾಗಿ ಬಂದರೆ ಗುರ್ ಎನ್ನುತ್ತಿದ್ದೆವು, ಒಂದು ದಿನ ಲಂಕೇಶ್ ಪತ್ರಿಕೆ ಮನೆಗೆ ಹಾಕುವುದು ತಡವಾದರೆ, ನಾನೇ ಅಂಗಡಿಯಿಂದ ತಂದು ಬಿಟ್ಟು, ಮನೆಗೆ ಮುಂದಿನ ದಿನ ಹಾಕಿದ ಲಂಕೇಶ್ ಪತ್ರಿಕೆಯನ್ನು ವಾಪಸ್ಸು ಕಳಿಸುತ್ತಿದ್ದೆ!

ಇಲ್ಲಿ ಕಂಪ್ಯೂಟರ್ ಮುಂದೆ ಕೂತು, ನ್ಯೂಸ್ ಓದುವ ವಿಚಿತ್ರ ಅಭ್ಯಾಸ ರೂಢಿಯಾಗಿದ್ದರೂ, ಮುಂಜಾನೆ ಕಾಲ ಮೇಲೆ ಕಾಲು ಹಾಕಿಕೊಂಡು ಒಂದು ಕೈಯಲ್ಲಿ ಕನ್ನಡ ದಿನಪತ್ರಿಕೆ ಹಿಡಿದುಕೊಂಡು, ಇನ್ನೊಂದು  ಕೈಯಲ್ಲಿ ಚಹಾದ ಲೋಟ ಹಿಡಿದುಕೊಂಡು ಕೂಡುವ ಸುಖ ನೆನೆದು ಬೇಸರವಾಗುತ್ತೆ. ಅಷ್ಟು ದಿನ ಪೇಪರ್ ಹಾಕುವ ಹುಡುಗರನ್ನು ಒಂದಿನವೂ ಮಾತಾಡಿಸದೇ ಹೋದದ್ದಕ್ಕೆ ಮನಸ್ಸು ಖಿನ್ನವಾಗುತ್ತೆ.

Sunday, October 11, 2009

ನೀಲು ೨೮



ಮತ್ತೆ ಮಳೆ ನಿಂತಿದೆ

ನನ್ನ ಕಿಟಕಿಯ ಗಾಜಿನ ಮೇಲೆ 

ನಿಂತ ನೀರ ಹನಿಗಳನ್ನು

ಪೋಣಿಸುತ್ತೇನೆ

ಖುಷಿಯಾಗುತ್ತದೆ

ಹಾಗೆ ಸುಮ್ಮನೆ

Monday, October 05, 2009

ಕೆಂಡಸಂಪಿಗೆಯ ಸಾವನ್ನು ನೆನೆಯುತ್ತ...

ನಾನೂ ಕೆಂಡಸಂಪಿಗೆಗೆ ಅತ್ಯಂತ ಅನಿಯಮಿತವಾಗಿ ಬರೆಯುತ್ತಿದ್ದೆ, ಆದರೆ ದಿನವೂ ತಪ್ಪದೇ ಓದುತ್ತಿದ್ದೆ. ಕೆಂಡಸಂಪಿಗೆ ನಿಂತಿದೆ, ಒಂದು ಕಡೆ ಕನ್ನಡ ದಿನ ಪತ್ರಿಕೆಗಳ ಸಂಖ್ಯೆ ಮತ್ತು ಪ್ರಸಾರ ದಿನೆ ದಿನೆ ಹೆಚ್ಚಾಗುತ್ತಿದೆ. ಆದರೆ ಕನ್ನಡದ ಜಾಲಗಳು ಮುಚ್ಚುತ್ತಿವೆ. ಜಾಲ ನಡೆಸುವುದು ಅಷ್ಟೊಂದು ದುಬಾರಿಯ ಕೆಲಸವೇ? ನನ್ನ ಬ್ಲಾಗನ್ನೇ ನೋಡಿ. ಅದಕ್ಕೆ ನನ್ನ ಕಡೆಯಿಂದ ಖರ್ಚು - ಸೊನ್ನೆ. ಅದಕ್ಕೆ ನಾನು ತೆರುವ ಬೆಲೆ - blogspot ಎಂಬ ಕೊಂಡಿ. ಅದಿದ್ದರೇನಂತೆ. ನನ್ನ ಬ್ಲಾಗು ನನ್ನದು. ಬ್ಲಾಗಿನ ಹಂಗಿಲ್ಲದೇ ಸ್ವತಂತ್ರವಾಗಿ ಜಾಲ ನಡೆಸುವ ಖರ್ಚು ಎಷ್ಟು ಎಂದು ನನಗೆ ಗೊತ್ತಿಲ್ಲ. ಆದರೆ ಅದು ಪತ್ರಿಕೆ ನಡೆಸುವಷ್ಟು ದುಬಾರಿಯಾಗಿರಲು ಸಾಧ್ಯವೇ ಇಲ್ಲ. ಬಹುಷಃ ದಿನ ಪತ್ರಿಕೆ ನಡೆಸುವ ಖರ್ಚಿನ ಒಂದಂಶವೂ ಆಗುವುದು ಸಂಶಯವೇ (ಗೊತ್ತಿದ್ದವರು ಮಾಹಿತಿ ಕೊಡಬೇಕು)!


ಪಾಶ್ಚಾತ್ಯ ದೇಶಗಳಲ್ಲಿ ದಿನಪತ್ರಿಕೆ ನಡೆಸುವುದೇ ದುಸ್ತರವಾಗುವ ಸ್ಥಿತಿ ಇದೆ. ಅದಕ್ಕೆ ಕಾರಣ ಮನೆ ಮನೆಯಲ್ಲಿ ಕೂತಿರುವ ಇಂಟರ್ನೆಟ್, ಜೇಬು ಜೇಬುಗಳಲ್ಲಿ ಕೂತಿರುವ ಸ್ಮಾರ್ಟ್ ಫೋನುಗಳು. ಅದಕ್ಕೇ ಈ ಪತ್ರಿಕೆಗಳು ತಮ್ಮ ಆದಾಯ ಉಳಿಸಿಕೊಳ್ಳಲು ಜಾಲಕ್ಕೆ ಕೈ ಹಾಕಿವೆ. ಬರೀ ಜಾಲ ಮಾಡಿ ಕೂಡ ಇಲ್ಲಿ ಬದುಕಬಹುದು, ಏಕೆಂದರೆ ಅಷ್ಟೊಂದು ಜನ ಜಾಲಸಂಪರ್ಕ ಹೊಂದಿದ್ದಾರೆ. ಅದಲ್ಲದೇ ಇಂಗ್ಲೀಷು ಬರೀ ಇಂಗ್ಲಂಡು ಅಮೇರಿಕಕ್ಕೆ ಸೀಮಿತವಲ್ಲವಲ್ಲ! ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್, ಕೆನಡಾ, ಮತ್ತು ಎಲ್ಲ ಭಾರತದಂತಹ ದೇಶಗಳಲ್ಲೀ ಇದೆ. ಜಾಹಿರಾತುಗಳು ಆಯಾ ದೇಶಕ್ಕೆ, ಪ್ರದೇಶಕ್ಕೆ ತಕ್ಕಂತೆ ಜಾಲದಲ್ಲಿ ಬದಲಾಗುವ ವ್ಯವಸ್ಥೆಯೂ ಇದೆ. ಈ ಸೌಭಾಗ್ಯ ಕನ್ನಡದ ಜಾಲಕ್ಕೆ ಇಲ್ಲವಲ್ಲ! ನಮ್ಮ ದೇಶದ ಇತರ ಭಾಷೆಗಳ ಜಾಲಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಿಲ್ಲ ಎಂದು ಕೊಂಡಿದ್ದೇನೆ.

ದಿನಕ್ಕೆ ನನ್ನ ಬ್ಲಾಗಿನಂತೆ ನೂರಾರು ಬ್ಲಾಗುಗಳು ಹುಟ್ಟುತ್ತವೆ, ಬಹಳಷ್ಟು ಹುಟ್ಟುತ್ತಲೇ ಸಾಯುತ್ತವೆ, ಕೆಲವು (ನನ್ನ ಬ್ಲಾಗಿನಂತೆ) ತೆವಳುತ್ತ ತೆವಳುತ್ತ ಇನ್ನೂ ಉಸಿರಾಡುತ್ತಿವೆ, ಕೆಲವೇ ಕೆಲವು ಮಾತ್ರ ಗಟ್ಟಿಯಾಗಿ ಬೇರುರುತ್ತಿವೆ (ಶಿವು, ಶ್ರೀಶಂ, ಮಲ್ಲಿಕಾರ್ಜುನ, ಸಿಮೆಂಟು ಮರಳು ಇತ್ಯಾದಿ). ಗ್ರುಪ್‍ಬ್ಲಾಗುಗಳಾದ ಅವಧಿ ಚೆನ್ನಾಗಿ ಕೆಲಸ ಮಾಡುತ್ತಿದೆ. ಆದರೆ ಕೆಂಡಸಂಪಿಗೆಯನ್ನು ಹೋಲುವ ಅಥವಾ ಅದಕ್ಕೆ ಸಮಾಂನಾಂತರವಾಗಿ ಇರುವ ಒಂದೇ ಒಂದು ಜಾಲವಿಲ್ಲದಿರುವುದು ಕನ್ನಡದ ದುರಂತವೇ ಸರಿ.

ಯಾಹೂ ಕನ್ನಡ, ದಾಟ್ಸ್ ಕನ್ನಡ, ವೆಬ್ ದುನಿಯಾಗಳು ಸುದ್ದಿಗಿಂತ ಹೆಚ್ಚೇನನ್ನೂ ಕೊಡಲಾರವು. ಇದ್ದರೂ ಅದು ಪಾಪ್ ಕಲ್ಚರ್‍ಗೆ ಸೀಮಿತ. ಕೆಂಡಸಂಪಿಗೆಯಂಥ ಬರಹಗಳು ಅವುಗಳಲ್ಲಿ ಕಡಿಮೆಯೇ.

ನಾಡಿನಿಂದ ದೂರ ಕೂತಿರುವ ನನ್ನಂಥವರಿಗೆ ಜಾಲಗಳು ಕೊಂಡಿಯಾಗಿ ಕೂತಿವೆ. ಲಂಕೇಶ್ ಸತ್ತಮೇಲೆ ಪತ್ರಿಕೆ ಸತ್ತಿದೆ. ಇದ್ದುದರಲ್ಲೇ ಒಂಚೂರು ಲಂಕೇಶ್ ಪತ್ರಿಕೆ ಹೋಲುವ ಹಾಯ್, ಜಾಲದಲ್ಲಿ ಲಬ್ಯವಿಲ್ಲ. ತರಂಗ ಸುಧಾ ತಮ್ಮ ಗುಣಮಟ್ಟ ಯಾವತ್ತೋ ಕಳೆದುಕೊಂಡು ಬಿಟ್ಟಿವೆ. ಇದ್ದುದರಲ್ಲ ಮಯೂರವೇ ವಾಸಿ. ಆದರೆ ಈ ಪತ್ರಿಕೆಗಳ ಜಾಲಗಳು ಓದಲು ಆಗದಷ್ಟು ಕಷ್ಟಕೊಡುತ್ತವೆ.

ಪ್ರತಿಸಲ ಭಾರತಕ್ಕೆ ಹೋದಾಗ ತರುವ ಕನ್ನಡ ಪುಸ್ತಕಗಳೇ ಇನ್ನು ಗತಿ ಅನಿಸುತ್ತದೆ. ಆದರೆ ಒಂದು ದಿಗಿಲು ನನ್ನಲ್ಲಿ ಬಹುಷಃ ಯಾವಾಗಲೂ ಕಾಡುತ್ತದೆ, "ಕನ್ನಡ ಬೆಡಗು ಪರಿಮಳ ದಶಕದಿಂದ ದಶಕಕ್ಕೆ ಕಡಿಮೆಯಾಗುತ್ತಿದೆಯೇ? ಕನ್ನಡ ಮುಂದೊಂದು ದಿನ ಸಾಯಲಿದೆಯೇ?"

Friday, October 02, 2009

ಗಾಂಧಿಯನ್ನು ಕೊಂದಿದ್ದು ಗೋಡ್ಸೆ ಅಲ್ಲ

ಗಾಂಧಿಯನ್ನು ಕೊಂದಿದ್ದು ಗೋಡ್ಸೆಯಲ್ಲ



ಇದ್ದ

ನಮ್ಮಜ್ಜ-ಅಜ್ಜಿಯರ
ನಮ್ಮಪ್ಪ-ಅಮ್ಮರ
ನನ್ನ-ನಿನ್ನ
ನಡುವೆ
ಇದ್ದ


ನಮ್ಮಜ್ಜ
ತನಗೆ ವಾರಸುದಾರರಿಲ್ಲವೆಂದು
ತನ್ನ ಮೂರನೇ ಹೆಂಡತಿಯಲ್ಲಿ
ನನ್ನಪ್ಪನನ್ನು ಬಿತ್ತುವ ವೇಳೆ
ಎದ್ದ



ನನ್ನಪ್ಪ
ಮೆಟ್ರಿಕ್ಯುಲೇಷನ್ನು ಮುಗಿಸಿ
ಬ್ರಿಟೀಷರ ಕೆಳಗೆ
ಮಾಮಲೆದಾರನಾಗಿ
ಸಂಬಳವೆಣಿಸುತ್ತಿರುವಾಗ
ಗೆದ್ದ


ನಾನು
ಪುಗಸಟ್ಟೆ M.B.B.S ಮುಗಿಸಿ
ದೇಶಬಿಟ್ಟು ಇಂಗ್ಲಂಡಿಗೆ
ಬಂದಾಗ
ಬಿದ್ದ


(ಈ ಹಿಂದೆ ಬರೆದ ಕವನವನ್ನು ಮತ್ತೊಮ್ಮೆ ಹಾಕುತ್ತಿದ್ದೇನೆ, ಗಾಂಧಿಯನ್ನು ನೆನೆಯತ್ತಾ)

Wednesday, September 23, 2009

ನೀಲು ೨೭


ದೇವರು ಆತ್ಮ ಆಧ್ಯಾತ್ಮ 

ಕಲೆ ಕಾವ್ಯ ಮದಿರೆ

ಕೊಡುವ ಎಲ್ಲ ಕಿಕ್ಕುಗಳೂ

ನನ್ನ ಒಂದು ತೆಕ್ಕೆಯಲ್ಲಿ

ನಿನಗೆ ಸಿಕ್ಕದ ದಿನ

ನಿನ್ನ ನೀಲು ಸಾಯುತ್ತಾಳೆ

ಬರೆದಿಟ್ಟುಕೋ!

Monday, September 21, 2009

ನೀಲು ೨೬

ನಿನ್ನ ಕೆನ್ನೆಯ ಆಫ್ಟರ್ ಶೇವಿಗಿಂತ 

ನಿನ್ನ ಮೈವಾಸನೆಯೇ ಹೆಚ್ಚು ಇಷ್ಟ

ಎಂದರೆ

ಸೊಕ್ಕಿನಲ್ಲಿ ಸ್ನಾನ ಮಾಡದೇ ಇರಬೇಡ

ಆಫ್ಟರ್ ಶೇವ್ ಹಾಕುವುದನ್ನು ಬಿಡಬೇಡ

Sunday, June 28, 2009

ಇಂದು ಎಸ್.ಪಿ ಭೂಪ ರಾಗದ ಗುಂಗನ್ನು ಹಿಡಿಸಿದ್ದು

ಇವತ್ತು ಈ-ಟಿವಿಯಲ್ಲಿ ಒಂದು ಹುಡಿಗಿ "ನಾಗಮಂಡಲ"ದ ಸಂಗೀತಾ ಕಟ್ಟಿ ಹಾಡಿರುವ "ಈ ಹಸಿರು ಸಿರಿಯಲಿ ಮನಸು ನಲಿಯಲಿ ನವಿಲೇ" ಎಂಬ ಹಾಡು ಹಾಡಿದಳು.



ಈ ಹಾಡಿನ ನಂತರ ಎಸ್.ಪಿ ಇದು ರಾಗ್ ಭೂಪ್ (ಭೂಪಾಲಿ ಅಂತಲೂ ಕರೆಯುತ್ತಾರೆ) ಎಂದು ರಾಗದ ಚಲನವನ್ನು ಹಾಡಿ ತೋರಿಸಿದರು. ನಂತರ, ಈ ರಾಗದಲ್ಲಿ ತುಂಬ ಚಂದದ ಹಾಡುಗಳನ್ನು ಹೊಸೆದ ಭೂಪೇನ್ ಹಜಾರಿಕಾರನ್ನು ನೆನೆಸಿಕೊಂಡಿದ್ದು ತುಂಬ ಚೆನ್ನಾಗಿತ್ತು. ಭೂಪ ರಾಗ ನಸುಕಿನ ರಾಗ, ಭೂಪೇನ್ ಆಸಾಮಿನವರು, ಭಾರತದಲ್ಲಿ ಮೊಟ್ಟಮೊದಲು ನೇಸರ ಕಾಣಿಸುವ ಪ್ರದೇಶದವರು, ಅದಕ್ಕೇ ಅವರಿಗೆ ಭೂಪ ರಾಗ ತುಂಬ ಇಷ್ಟವಿರಬಹುದೇ ಎಂದು ತಮ್ಮಲ್ಲಿಯೇ ನಕ್ಕರು. "ರುಡಾಲಿ" ಚಿತ್ರದ "ದಿಲ್ ಹುಂ ಹುಂ ಕರೇ" ಹಾಡು ಕೂಡ ಇದೇ ರಾಗದ್ದು ಎಂದು ಹೇಳಿದರು.



ಭೂಪ ರಾಗ ಕೇವಲ ಐದು ಸ್ವರಗಳ ರಾಗ "ಸಾ ರೆ ಗ ಪ ಧ ಸಾ"



ರಾಗದ ಏರಿಳಿತಗಳು ತುಂಬ ಇಂಪು. ರಾಗದ ಒಂದು ರಚನೆ ಇಲ್ಲಿ ಹಾರ್ಮೋನಿಯಂನಲ್ಲಿ:



ಈ ರಾಗ ನಸುಕಿನ ರಾಗ ಎಂದು ಹೇಳಿದೆನಷ್ಟೇ. ರಾಗ್ ಭೂಪದ ಈ ಕೊಳಲನ್ನು ಕೇಳಿ, ನಿಜ ಅನ್ನಿಸದಿರದು.



ಹಿಂದಿಯಲ್ಲಿ ಈ ರಾಗದಲ್ಲಿ ತುಂಬ ಹಾಡುಗಳಿವೆ:

ಭೂಪ ರಾಗ ಹಿಂದುಸ್ಥಾನಿ ಸಂಗೀತದಲ್ಲಿ ಬಹಳಷ್ಟು ಕಡೆ ಮೊಟ್ಟಮೊದಲು ಹೇಳಿ ಕೊಡುವ ರಾಗ. ಈ ಸಿನೆಮಾ ಹಾಡನ್ನು ಹಿಂದುಸ್ಥಾನಿ ಪಾಠಮಾಡುವವರೂ ಹೇಳಿಕೊಡುತ್ತಾರೆ. ಲತಾ ಮಂಗೇಶ್ಕರ್ ಹಾಡಿದ ಈ ಹಳೆಯ ಹಾಡು ಇನ್ನೂ ಸಂಗೀತ ಕಲಿಯುವವರ ಬಾಯಲ್ಲಿ ನಲಿದಾಡುತ್ತದೆ, "ಜ್ಯೋತಿ ಕಲಶ ಛಲಕೆ"



ಹೆಣ್ಣು ನೋಡಲು ಬಂದಾಗ, ಇದೇ ರಾಗದಲ್ಲಿ ನಮ್ಮ ಮಾಮಿ "ಯೋಗಿ ಮನೆಗೆ ಬಂದ" ಎಂದು ಹಾಡಿ ನಮ್ಮ ಮಾಮಾನ ಮನೆ ಗೆದ್ದದ್ದು ನನಗಿನ್ನೂ ಚೆನ್ನಾಗಿ ನೆನಪಿದೆ.



ಹಂಸಾನಂದಿಯವರು ಟ್ವಿಟರಿನ ಮೂಲಕ ಈ ಕೆಳಗಿನ ಎರಡು ಭೂಪರಾಗದ ಹಾಡುಗಳನ್ನು ಟ್ವೀಟಿಸಿದ್ದಾರೆ, ಮತ್ತು ನನ್ನ ತಪ್ಪುಗಳನ್ನು ತಿದ್ದಿದ್ದಾರೆ.

ರೇಡಿಯೋ ಕಾಲದಲ್ಲಿ "ಅಭಿಲಾಷೆ"ಯಲ್ಲಿ ಪ್ರತಿಸಲ ಬರುತ್ತಿದ್ದ ವೈದ್ಯನಾಥನ್ ಸಂಗೀತದ "ಏಳು ಸುತ್ತಿನ ಕೋಟೆ" ಚಿತ್ರದ "ಸಂತಸ ಅರಳುವ ಸಮಯ"



ಕನ್ನಡದ ಇನ್ನೊಂದು anthem ಆಗಿಹೋದ ರಾಜಕುಮಾರ ಹಾಡಿದ "ಜೇನಿನ ಹೊಳೆಯೋ" ಕೂಡ ಭೂಪರಾಗ.



(ತಪ್ಪಿದ್ದಲ್ಲಿ ಸಂಗೀತ ಗೊತ್ತಿದ್ದವರು ತಿದ್ದಬೇಕು)
(ವಂದನೆಗಳು: ಯುಟ್ಯೂಬಿನಲ್ಲಿ ಈ ಸುಂದರ ಹಾಡುಗಳನ್ನು ಹಾಕಿದ ಎಲ್ಲರಿಗೂ)

Share/Save/Bookmark

Monday, June 08, 2009

ಜಗಜೀತ್ ಸಿಂಗ್, ರಾಜಕುಮಾರ ಮತ್ತು ರಾಗ್ ಲಲಿತ್

ಮನೆಯಲ್ಲಿ ಮನೆಯೊಡತಿ ಇಲ್ಲದ ಹೊತ್ತು, ಮಾಡಲು ಕೆಲಸವಿಲ್ಲ. ರಾಜಕುಮಾರನ "ಕಣ್ಣೀರಧಾರೆ ಇದೇಕೇ" ಎಂದು ನನ್ನ ಕೆಟ್ಟ ಧ್ವನಿಯಲ್ಲಿ ಹಾಡುತ್ತ ಕೂತಿದ್ದೆ. ಅದು ರಾಗ್ ಲಲಿತ್ ಅಂತ ಯಾರೋ (ಹಂಸಾನಂದಿ ಇರಬಹುದೇ?) ಹೇಳಿದ್ದು ನೆನಪಾಯಿತು. ಆಯಿತು, ಜಾಲ ಜಾಲಾಡಲು ಶುರುಮಾಡಿದೆ. ನಾನಂತೂ ಗಾರ್ದಭಗಾನಾಸುರ, ನನ್ನ ಸಂಗೀತ ಜ್ಙಾನಯೂ ಅದಕ್ಕಿಂತ ಮುಂದೆ ಇಲ್ಲ. ಹಿಂದುಸ್ತಾನೀ ಸಂಗೀತ ನನಗೆ ತುಂಬ ಇಷ್ಟ, ಆದರೆ ಅದರೆ ಅಕ್ಷರಗಳು ಗೊತ್ತಾಗುವ ಮೊದಲೇ ದೇಶಬಿಟ್ಟು ಇಲ್ಲಿ ಬಂದು ಕೂತದ್ದಾಗಿದೆ. ಸಂಸಾರಸಾಗರದಲ್ಲಿ ಮುಳುಗಿ, ಸಂಗೀತ-ಸಾಹಿತ್ಯ ಎರಡಕ್ಕೂ ಎಣ್ಣೆ-ಸೀಗೆಕಾಯಿ ಮಾಡಿ ಕೂತದ್ದಾಗಿದೆ. ಆದರೂ ಆಗಾಗ ಇಂಥಾ ತೆವಲುಗಳು ಶುರುವಾಗುತ್ತವೆ. ಈಗ ಎರಡು ದಿನದಿಂದ ಬರೀ ಒಂದೇ ತಾನ "ನಿ ರೆ ಮ ಮ ಮ ಮ, ನಿ ರೆ ಮ ಮ ಮ ಮ" (bold ಅಲ್ಲಿರೋದು ಶುದ್ಧ ನಿ, ಮತ್ತು ತೀವ್ರ ಮ).

ರಾಗ್ ಲಲಿತ್ ಕೇಳಲು ತುಂಬ ಚಂದ, ಯಾಕೆ ಅಂತ ಗೊತ್ತಿರಲಿಲ್ಲ. ಅಲ್ಲಲ್ಲಿ ಜಾಲಾಡಿಸಿ ಕೀಬೋರ್ಡಿನಲ್ಲಿ ಅಲ್ಲಲ್ಲಿ ಕುಟ್ಟಿದ ಮೇಲೆ ನನಗನ್ನಿಸಿದ್ದನ್ನು ಬರೆಯುತ್ತಿದ್ದೇನೆ, ತಿಳಿದವರು ಮನ್ನಿಸಬೇಕು, ತಿದ್ದಬೇಕು. ಈ ರಾಗದಲ್ಲಿ ಎರಡು "ಮ"ಗಳು ಆರೋಹ ಅವರೋಹ ಎರಡರಲ್ಲೂ ಬರುತ್ತವೆ, ಮತ್ತು ಶುದ್ಧ "ಗ"ದಿಂದ ಕೋಮಲ "ರೆ"ಗೆ ಇಳಿಯುವ ರೀತಿಯಲ್ಲೇ ಈ ರಾಗದ ಮೋಡಿಯಿದೆ ಅನ್ನಿಸುತ್ತೆ.



ನಾನು ಚಿಕ್ಕವನಾಗಿದ್ದಾಗ, ನಮ್ಮ ಮನೆಗೆ ಅದೇ ತಾನೆ ಮನೆಗೆ ಹೊಸದಾಗಿ ಬಂದ ಕ್ಯಾಸೆಟ್ ಪ್ಲೇಯರ್ (ನಾವದಕ್ಕೆ ಟೂ-ಇನ್-ಒನ್)ನಲ್ಲಿ ರಾಜಕುಮಾರನ ಈ ಹಾಡು ಕೇಳಿದ್ದೂ ಕೇಳಿದ್ದೇ, ನನ್ನ ಕೆಟ್ಟ ಕಂಠದಲ್ಲಿ ಹಾಡಿದ್ದೂ ಹಾಡಿದ್ದೇ. ಆಗ ನಮ್ಮ ಪಕ್ಕದ ಮೆನೆ ರಸೀದ ಈ ಹಾಡು ಕೇಳುತ್ತಲೇ ಇದು ಹಿಂದಿಯಲ್ಲಿದೆ ಎಂದುಬಿಟ್ಟ. ನನಗಾಗ ಕೆಂಡಾಮಂಡಲು ಸಿಟ್ಟು ಬಂತು. ಎಂ.ರಂಗರಾವ್ ಆ ತರಹ ಟ್ಯೂನ್ ಕದಿಯುವುದಿಲ್ಲ, ರಾಜಕುಮಾರ್ ಅಂಥ ಕದ್ದ ಟ್ಯೂನ್ ಹಾಡುವುದಿಲ್ಲ ಎಂದು ವಾದ ಮಾಡಿದ್ದೆ. ಅದಾದ ಸ್ವಲ್ಪ ದಿನಗಳ ಮೇಲೆ ಅವನೇ ಎಲ್ಲಿಂದಲೋ ಜಗಜೀತನ ಈ ಹಾಡನ್ನು ನಮ್ಮ ಟೂ-ಇನ್-ಒನ್ನಲ್ಲೇ ಕೇಳಿಸಿ ದಂಗುಬಡಿಸಿಬಿಟ್ಟ. ಒಂದು, ನನ್ನ ವಾದಕ್ಕೆ ಸೋಲಾಗಿತ್ತು. ಎರಡು, ಅದುವರೆಗೂ ಎಂದೂ ಕೇಳದ ಅದ್ಭುತ ಧ್ವನಿ ಕಿವಿಯ ಮೇಲೆ ಬಿತ್ತು. ಅವತ್ತೇ ನಾನು ಜಗಜೀತನ ದೊಡ್ಡ ಫ್ಯಾನ್ ಆಗಿಬಿಟ್ಟೆ. ಆಗ ಶುರುವಾದ ನನ್ನ ಜಗಜೀತನ ಸಹವಾಸ ಇನ್ನೂ ಬಿಟ್ಟಿಲ್ಲ.




ಇಲ್ಲಿದೆ ಆ ಹಾಡಿನ ನನ್ನ ಕನ್ನಡೀಕರಣ:

ಯಾರೋ ಬಳಿ ಬಂದರು ನಸುಕು ನಸುಕು
ನನ್ನ ಕೆಣಕ ಬಂದರು ನಸುಕು ನಸುಕು

ನನ್ನ ಕತೆಯ ಅಲ್ಲಲ್ಲಿ ಬದಲಿಸಿ
ನನಗೇ ಹೇಳಿದರು ನಸುಕು ನಸುಕು

ಸಾವರಿಸು ಅಂತ ಹೇಳುವವರೇ
ತಡವರಿಸುತಿಹರು ನಸುಕು ನಸುಕು

ರಾತ್ರಿ ಪೂರ್ತಿ ಹೆಂಡದ ಮನೆಯಲ್ಲಿ
ದೇವರ ನೆನಪಾಯಿತು ನಸುಕು ನಸುಕು