Tuesday, December 29, 2009

ಇನ್ನಿಲ್ಲವಾಯಿತೇ...

(ನನ್ನ ತಮ್ಮ ಮಾಧವ ಕುಲಕರ್ಣಿ ನನ್ನ ಮಿನ್ನೋಲೆಗೆ ಕಳಿಸಿದ ಸಿ ಅಶ್ವಥ್ ಕವನಾಂಜಲಿಯನ್ನು ಇಲ್ಲಿ ಬರೆಯದೇ ಇರಲಾಗಲಿಲ್ಲ)


ಇನ್ನಿಲ್ಲವಾಯಿತೇ ಆ ದನಿ
ಸರಿಗಮದ ಅಮೃತ ಹನಿ


ಭಾವ ಕೊಳದ ತಳಕ್ಕೆ ತಳುಹಿ
ಮೌನಕ್ಕೆ ಮಾತು ಹೇಳಿಕೊಡುವ
ಭಾವತ್ರಪ್ತ ದನಿ


ಪುಸ್ತಕದಿಂದ ಮಸ್ತಕಕ್ಕೆ ಇಳಿಯುವಹಾಗೆ
ಪ್ರತಿ ಪದಗಳಿಗೆ ಭಾವಮೂರ್ತಿ ಕೆತ್ತುವ
ಮಹಾಶಿಲ್ಪಿ ದನಿ


ಭಾವಸಮುದ್ರದ ಧುಮ್ಮಿಕ್ಕುವ ಅಲೆಗಳ ಮಹಾಪೂರ
ಗುಡುಗುಡಿಸುವ ಶಬ್ದತಾಳಗಳ ಮೇಳ


ಇನ್ನು ಭಾವಕವಿಗಳ ಕವನಗಳೆಲ್ಲ ಯಾಕ?
ಆ ದನಿಯಿಲ್ಲದೇ ಪದಪುಂಜಗಳೆಲ್ಲ ಮೂಕ

(image courtesy: The Hindu)

http://kannada-nudi.blogspot.com/2006/07/opinion-c-aswath-kannada-literature.html
ನಾನು ಜುಲೈ ೨೦೦೬ರಲ್ಲಿ ಸಿ ಅಶ್ವಥ್ ಬಗ್ಗೆ ಬರೆದ ಲೇಖನ ಇಲ್ಲಿದೆ, ಅದನ್ನು ಮುಟ್ಟದೇ ಇಲ್ಲಿ ಮತ್ತೊಮ್ಮೆ ಕೊಂಡಿ ಕೊಡುತ್ತಿದ್ದೇನೆ.

Monday, December 14, 2009

ನೀಲು ೩೨


ಎಷ್ಟು ಓದಿದರೂ
ಏನೆಲ್ಲ ನೋಡಿದರೂ
ಏನೆನೋ ಅನುಭವಿಸಿದರೂ
ಗೊತ್ತಾಗದ ಬದುಕಿನ ಅರ್ಥ
ಬಿಚ್ಚಿಕೊಳ್ಳುವುದು 
ಸಾಯುವ ದಿನ ತುಂಬ ದೂರವಿಲ್ಲ 
ಎಂದು ಗೊತ್ತಾದಾಗ.
ಶುದ್ಧ ಅಪ್ರಯೋಜಕ!

ನೀಲು ೩೧



ನಾನು

ನನ್ನ ಗುಟ್ಟುಗಳನ್ನು

ಒಂಬತ್ತು ತಿಂಗಳು ಹೊತ್ತು

ನೀಲುಗಳಾಗಿ ಹೆರುತ್ತೇನೆ;

ಗಂಡೋ ಹೆಣ್ಣೋ ಪಿಂಡವೋ ಅಷ್ಟಾವಕ್ರವೋ?

ನನಗೆ ಮಾತ್ರ ಅದು ಮುದ್ದು ಮತ್ತು ಮದ್ದು!